ನಿನ್ನ ಕೊಂದು ಹಾಕುತ್ತೇವೆ'; ಟೀಮ್​ ಇಂಡಿಯಾ ಕೋಚ್​ಗೆ ಬೆದರಿಕೆ ಸಂದೇಶ!

varthajala
0

 


ಟೀಮ್​ ಇಂಡಿಯಾದ ಮುಖ್ಯ ಕೋಚ್ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. 'ನಾನು ನಿನ್ನನ್ನು ಕೊಲ್ಲುತ್ತೇನೆ' ಎಂಬ ಸಂದೇಶವಿರುವ ಅನಾಮಧೇಯ ಇ-ಮೇಲ್‌ಗಳು ಬಂದಿವೆ ಎಂದು ಗಂಭೀರ್ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಇ-ಮೇಲ್​ ಯಾರು ಕಳುಹಿಸಿದ್ದಾರೆ ಎಂಬುದರ ಕುರಿತು ಸೈಬರ್ ಸೆಲ್ ತನಿಖೆ ಪ್ರಾರಂಭಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಗೌತಮ್​ ಗಂಭೀರ್​ ಪ್ರತಿಕ್ರಿಯಿಸಿದ್ದರಿಂದ ಈ ಬೆದರಿಕೆ ಸಂದೇಶ ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ, ದೆಹಲಿ ಪೊಲೀಸರ ಮೊರೆ ಹೊಗಿರುವ ಗಂಭೀರ್ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬೆದರಿಕೆಗಳು ಕಾಶ್ಮೀರದಿಂದಲೇ ಬಂದಿವೆ ಎಂದು ವರದಿಯಾಗಿದೆ.

ಪಹಲ್ಗಾಮ್​ ಘಟನೆ ಬಳಿಕ ಪೋಸ್ಟ್​ ಹಂಚಿಕೊಂಡಿದ್ದ ಗಂಭೀರ್​, "ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದರು. ಇದಕ್ಕೆ ಕಾರಣರಾದವರು ಖಂಡಿತವಾಗಿಯೂ ಭಾರಿ ಬೆಲೆ ತೆರಬೇಕಾಗುತ್ತದೆ. ಈ ಘಟನೆಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆ" ಎಂದು ಪೋಸ್ಟ್ ಮಾಡಿದ್ದರು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಪಾಕಿಸ್ತಾನ ಪ್ರಧಾನಿ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟರ್​ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಪಾಕ್​ನ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಟೀಕಿಸಿದ್ದಾರೆ. ಪ್ರಧಾನಿ ಷರೀಫ್‌ಗೆ ಸತ್ಯ ತಿಳಿದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಯೇ ಭಯೋತ್ಪಾದಕರನ್ನು ಪೋಷಿಸುತ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

"ಪಹಲ್ಗಾಮ್​​ನಲ್ಲಿ ಪಾಕಿಸ್ತಾನದ ಪಾತ್ರವಿಲ್ಲದಿದ್ದರೆ, ಪ್ರಧಾನಿ ಷರೀಫ್ ಏಕೆ ಅದನ್ನು ನೇರವಾಗಿ ಏಕೆ ಖಂಡಿಸಲಿಲ್ಲ? ಅಲ್ಲದೇ ಘಟನೆ ಬೆನ್ನಲ್ಲೇ ಪಾಕ್​ನಲ್ಲಿ ಇದ್ದಕ್ಕಿದ್ದಂತೆ ಹೈ ಅಲರ್ಟ್ ಘೋಷಿಸಿದ್ದು ಏಕೆ? ಏಕೆಂದರೆ ನಿಮಗೆ ಸತ್ಯ ತಿಳಿದಿದೆ. ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವವರು ಮತ್ತು ಪೋಷಿಸುತ್ತಿರುವವರು ನೀವೇ. ನಿಮ್ಮನ್ನು ನೋಡಿ ನನಗೆ ನಾಚಿಕೆಯಾಗುತ್ತಿದೆ" ಎಂದು ತೀವ್ರವಾಗಿ ಖಂಡಿಸಿದ್ದಾರೆ.

Post a Comment

0Comments

Post a Comment (0)