ಶತಮಾನೊತ್ಸವದಂಚಿನಲ್ಲಿ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ - ತುಮಕೂರಿನ ಪ್ರೊ.ಎನ್.ಅನಂತಚಾರ್‌ ಸಂಸ್ಮರಣೆ” ‌

varthajala
0

 ಬೆಂಗಳೂರು ; “ ಸೆಪ್ಟೆಂಬರ್ 5 ಆಧುನಿಕ ಭಾರತದ ಅಬ್ರಹಾಂ ಲಿಂಕನ್‌, ಕಾಯಕಯೋಗಿ, ಶ್ರೇಷ್ಠ ಶಿಕ್ಷಣ ತಜ್ಞ, ಮಾನವತಾವಾದಿ ಪ್ರೊ.ಎನ್.ಅನಂತಚಾರ್‌ ಜನ್ಮ ದಿನಾಚರಣೆ, ಸಂಸ್ಥಾಪಕರ ದಿನ, ಜೊತೆಗೆ ಶಿಕ್ಷಕರ ದಿನ. ಈ ತ್ರಿವಳಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ ನಗರದ ಪ್ರತಿಷ್ಟಿತ ಎ.ಪಿ.ಎಸ್‌ ಶಿಕ್ಷಣ ಸಂಸ್ಥೆ. ಪ್ರೊ.ಎನ್.ಅನಂತಚಾರ್‌ ಜನ್ಮದಿನ, ಸರ್ವೆಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನದಂದೇ ಬಂದಿರುವುದು ವಿಶೇಷವಾಗಿದೆ. ಈ ದಿನವನ್ನು  ಸಂಸ್ಥಾಪಕರ ದಿನವನ್ನಾಗಿಯೂ ಆಚರಿಸಲಾಗುತ್ತಿದೆ.

“ಬುದ್ಧಿಬರಬೇಕಾದರೆ ದೊಡ್ಡವರ ಸುದ್ದಿ ಕೇಳಿರಬೇಕೆಂಬ ದಾಸವಾಣಿಗೆ ಅನ್ವರ್ಥರಾಗಿದ್ದಾರೆ ಎ.ಪಿ.ಎಸ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಎನ್.ಅನಂತಚಾರ್‌. ಅವರು ಮಾತೃಬಾಷಾಪ್ರೇಮಿ, ನುಡಿದಂತೆ ನಡೆದ ಕಾಯಕಯೋಗಿ, ಧರ್ಮನಿರಪೇಕ್ಷತೆಯುಳ್ಳ, ಸರಳ, ಸಜ್ಜನಿಕೆಯ ಸಕಾರ ಮೂರ್ತಿ. ಸ್ವಾತಂತ್ರ ಪೂರ್ವದಲ್ಲಿ ಅಂದರೆ ಸ್ವಾತಂತ್ರ್ಯ ದೊರೆಕಿದ 12 ವರ್ಷಗಳ ಹಿಂದೆಯೆ ಬಹು ದೂರದೃಷ್ಟಿಯಿಂದ 1935ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಇವರು ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ಅಸಮಾನ್ಯ ಸಾಧನೆಗೈದ ಆದರ್ಶ ಪುರುಷ.
ಪ್ರೊ.ಎನ್.ಅನಂತಚಾರ್‌ 1910ರ ಸೆಪ್ಟೆಂಬರ್‌ 5ರಂದು ತುಮಕೂರು ಜಿಲ್ಲೆಯ ನ್ಯಾಮಗೊಂಡ್ಲುನಲ್ಲಿ ಎಂ.ನರಸಿಂಹ ಮೂರ್ತಿ ಆಚಾರ್‌ ಹಾಗೂ ತುಲಸಮ್ಮ ಅವರ ಪುತ್ರರಾಗಿ ಜನಿಸಿದರು. ಸ್ವಾತಂತ್ರಪೂರ್ವದಲ್ಲೇ ಮೈಸೂರು ವಿವಿಯಿಂದ ಬಿ.ಎ ಹಾಗೂ ಎಂ.ಎ ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕ್ರೀಡಾಸಕ್ತಿ ಹೊಂದಿದ್ದ ಅವರು ಕ್ರಿಕೆಟ್‌ ಆಟಗಾರರು. ಶಿಕ್ಷಣದ ಜೊತೆಗೆ ಕ್ರೀಡಾ ಪ್ರೇಮಿಯೂ ಸಹ ಆಗಿದ್ದರು. ಮಹಾಪುರುಷರ ಸಾಧನೆಯಲ್ಲಿ ಅವರ ಸಹಧರ್ಮೀಯದ್ದು ಸಿಂಹಪಾಲಿದೆ. ನರ್ಮದಾಬಾಯಿ ಅನಂತಚಾರ್‌ ಏಳು ಬೀಳುಗಳನ್ನು ಕಂಡವರು. ಪತಿಗೆ ಹೆಗಲಿಗೆ ಹೆಗಲುಕೊಟ್ಟು ಸಂಸ್ಥೆಯ ಶ್ರೇಯೊಭಿವೃದ್ದಿಗೆ ಶ್ರಮಿಸಿರುವ ಧೀಮಂತ ಮಹಿಳೆ. ಪತಿಯ ಕೆಲಸಕಾರ್ಯಗಳಿಗೆ ಸದಾಕಾಲ ಉತ್ತೇಜನ ನೀಡುತ್ತಾ ಅಧ್ಯಾಪಕರುಗಳಿಗೆ ಸಂಬಳ ನೀಡಲು ಹಣವಿಲ್ಲದಿದ್ದಾಗ ತಮ್ಮ ವಡವೆ ಅಡವಿಟ್ಟ ಮಹಾತ್ಯಾಗಮಯಿ.
                                                  
ಸ್ನಾತಕೊತ್ತರ ಪದವಿಧರರಾದ ಅವರು ಸರ್ಕಾರಿ ಕೆಲಸಕ್ಕೆ ಆಸೆ ಪಡದೆ, ತರಕಾರಿ ಅಂಗಡಿ ಇಟ್ಟುಕೊಂಡು ಜೀವನಸಾಗಿಸಿದ ಸ್ವಾಭಿಮಾನಿ. ಒಮ್ಮೆ ಅನಂತಚಾರ್‌ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕೆನಿಸುತ್ತದೆ ಎಂದು ಸಮೀಪದ ಶಾಲೆಯೊಂದರ ಮುಖ್ಯೊಪಾಧ್ಯಾಯರ ಬಳಿ ತಮ್ಮ ಇಚ್ಚೆ ವ್ಯಕ್ತಪಡಿಸಿದರು. ಆಗ “ತರಕಾರಿ ಮಾರುವ ನೀವು ನಮ್ಮ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತೋಪದೇಶ ಹೇಳಲು ಸಾಧ್ಯವೇ?. ನಮ್ಮ ಶಾಲೆಯ ಗೌರವ ಏನಾಗಬೇಕು, ತರಕಾರಿ ಮಾರುವವನಿಗೆ ಇಂತಹ ಆಲೋಚನೆ ಹೇಗೆ ಬಂತು. ಇದು ಎಂದಿಗೂ ಸಾದ್ಯವಿಲ್ಲ” ಎಂದು ಹೀಗೆಳೆದರಂತೆ. ಈ ಘಟನೆಯಿಂದ ಅನಂತಚಾರ್ಯರು ಜಗ್ಗಲಿಲ್ಲ, ಕುಗ್ಗಲಿಲ್ಲ ಬದಲಾಗಿ ತನ್ನನ್ನು ತಿರಸ್ಕರಿಸಿದ ಶಾಲೆಯ ಮಾದರಿಯಂತೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಪಣ ತೊಟ್ಟರು. ಅದರಂತೆ ಛಲಬಿಡದ ತ್ರಿವಿಕ್ರಮನಂತೆ, 1035 ರ ಆಗಸ್ಟ್ 15 ರಂದು ಎಪಿಎಸ್‌ ಶಿಕ್ಷಣ ಸಂಸ್ಥೆಗೆ ಆಡಿಗಲ್ಲು ಹಾಕಿಯೇ ಬಿಟ್ಟರು. ಅಂದು ಕೇವಲ ಮೂವರು ವಿದ್ಯಾರ್ಥಿಗಳಿಂದ ಸ್ಥಾಪಿಸಿದ ಸಂಸ್ಥೆ ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ನೀಡಿರುವ ಜ್ಞಾನದೇಗುಲವಾಗಿದೆ. ಅಂದು ನೆಟ್ಟ ಎಪಿಎಸ್‌ ಎಂಬ ಶಿಕ್ಷಣದ ಗಿಡ ಇಂದು ಹೆಮ್ಮರವಾಗಿ ಬೆಳೆದು, ಸಹಸ್ರಾರು ಜನರಿಗೆ ಅನ್ನಾಶ್ರಯ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಕ್ಷರ ದಾಸೋಹವನ್ನು ನೀಡುತ್ತಿರುವ ಜನರ ಜ್ಞಾನಜ್ಯೋತಿಯಾಗಿದೆ. ಇವರು ಸ್ಥಾಪಿಸಿದ ಎಲ್ಲಾ ಸಂಸ್ಥೆಗಳು ಕಲ್ಲುಗಳಿಂದ ಕೂಡಿದೆ, ಇಂದು ಅವರು ಕಟ್ಟಿಸಿದ ಕಟ್ಟಡಗಳ ಪ್ರತಿಯೊಂದು ಕಲ್ಲು ಅವರ ಜೀವನದ ಹಾದಿ, ಸಾಧನೆಗಳನ್ನು ಸಾರಿ ಹೇಳುತ್ತಿವೆ. ಅದನ್ನು ಗುರುತಿಸುವ ಕಣ್ಣು, ಅರ್ಥಮಾಡಿಕೊಳುವ ಹೃದಯ, ಆಲಿಸುವ ಕಿವಿ, ಆಸ್ವಾದಿಸುವ ಮನಸ್ಥಿತಿ ಇರಬೇಕು.
                                    
ಕೆಜಿ ಯಿಂದ ಪಿಜಿಯ ವರೆಗೆ ಶಿಕ್ಷಣಾವಕಾಶವಿರುವ ಪ್ರತಿಷ್ಠಿತ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಪ್ರೊ.ಎನ್.ಅನಂತಚಾರ್‌ ಅವರ ಪುತ್ರ ಸಿಎ.ಡಾ.ವಿಷ್ಣುಭರತ್‌ ಅಲಂಪಲ್ಲಿ ಅವರು ಸಹ ತಂದೆಯಂತೆ ಸರ್ವಾಂಗೀಣ ವ್ಯಕ್ತಿತ್ವದವರು. ಅವರ ನಾಯಕತ್ವದಲ್ಲಿ ಶಿಕ್ಷಣ ಸಂಸ್ಥೆ ಮತ್ತಷ್ಟು ಸಾಧನೆಯ ಹಾದಿಯತ್ತ ಸಾಗುತ್ತಿದೆ.

Post a Comment

0Comments

Post a Comment (0)