ಸಾಹಿತ್ಯಕ್ಕೆ ಆಡಳಿತದ ಹಿರಿಮೆಯನ್ನು ನೀಡಿದ ಮಾಸ್ತಿ: ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ

varthajala
0


ಬೆಂಗಳೂರು : ಉತ್ತಮ ಆಡಳಿತಗಾರರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅದರ ಹಿರಿಮೆಯನ್ನು ಸಾಹಿತ್ಯಕ್ಕೂ ನೀಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದರು, ಜೀವನ ಪತ್ರಿಕೆಯನ್ನು ನಡೆಸಿದರು. ಬರಹಗಾರರಿಗೆ ಬೆಂಬಲವಾದರು, ಪುಸ್ತಕ ಪ್ರಕಾಶನಕ್ಕೆ ಸಹಾಯ ಮಾಡಿದರು. ಇದರಿಂದ ಕನ್ನಡ ಸಾಹಿತ್ಯ ಬಹುಮುಖಿಯಾಗಿ ಬೆಳೆಯುವುದು ಸಾಧ್ಯವಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರರ 133ನೆಯ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮಾಸ್ತಿಯವರು ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಬೇಕು ಎಂದು ಸೂಚಿಸಿದವರಲ್ಲಿ ಪ್ರಮುಖರು ಎಂದು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು 1943ರಲ್ಲಿ ಮಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದರು. ಅವರ ಬಹಳ ಮುಖ್ಯವಾದ ಕೊಡುಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಕೇಂದ್ರೀಕರಣ. ಆರ್ಥಿಕ ಸೌಕರ್ಯವು ಸದಸ್ಯರ ಸಂಖ್ಯೆಯನ್ನು ಅವಲಂಬಿಸಿರಬೇಕು ಎನ್ನುವ ನಿಯಮವನ್ನು ಮಾಡಿದ್ದರಿಂದ ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಾಯಿತು. ಅವರ ಕಾಲದಲ್ಲಿ ಸದಸ್ಯರ ಸಂಖ್ಯೆ 2,500ಕ್ಕೆ ಏರಿತು. ಮಹಿಳಾ ಶಾಖೆ ಕೂಡ ಆರಂಭವಾಯಿತು. ‘ಕನ್ನಡ ಸರಸ್ವತಿ ಹಳ್ಳಿಗೆ ಬಂದಳು’ ಎನ್ನುವ ಯೋಜನೆಯಡಿ ಹಳ್ಳಿ-ಹಳ್ಳಿಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆದವು. ಅವರ ಅವಧಿಯಲ್ಲಿಯೇ ಪರಿಷತ್ತಿಗೆ ದೂರವಾಣಿ ಸೌಲಭ್ಯ ಬಂದಿತು ಆಶುಭಾಷಣ, ಕಂಠಪಾಠ, ದೇವರನಾಮ, ಅಭಿನಯ, ಹಾಡುಗಾರಿಕೆ

ಹೀಗೆ ವಿವಿಧ ಸ್ಪರ್ಧೆಗಳು ನಡೆದವು. ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎಷ್ಟೇ ದೂರ ಪ್ರಯಾಣ ಮಾಡಿದರೂ ಪ್ರಯಾಣ ಭತ್ಯವನ್ನು ಪಡೆಯುತ್ತಿರಲಿಲ್ಲವೆಂದು ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ನಿಧನರಾದರು, ಆಗ ಎಂಟು ತಿಂಗಳುಗಳ ಕಾಲ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅವರೇ ಮುಂದುವರೆಯಬೇಕು ಎಂಬ ಒತ್ತಡವಿದ್ದರೂ ವಾರ್ಷಿಕ ಸಭೆಯಲ್ಲಿ ಲೆಕ್ಕ ಪತ್ರಗಳನ್ನು ಒಪ್ಪಿಸಿ ಹೊಸ ಅಧ್ಯಕ್ಷರನ್ನು ಆರಿಸಿ ಕೊಳ್ಳುವಂತೆ ತಿಳಿಸಿದರು. ಅದರಂತೆ ಪ್ರೊ.ಎ.ಎನ್.ಮೂರ್ತಿರಾಯರು ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಮಾಸ್ತಿಯವರ ಹಿರಿಮೆಯನ್ನು ಸ್ಮರಿಸಿಕೊಂಡು, ಮಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಶಿಸ್ತು ಮತ್ತು ಮೌಲ್ಯಗಳನ್ನು ನೀಡಿದರು. ಇಂದಿಗೂ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ಹೇಳಿ ಅವರೊಂದಿಗಿದ್ದ ಒಡನಾಟದ ಪ್ರಸಂಗಗಳನ್ನು ಸ್ಮರಿಸಿ ಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾದ ಶಿವಾನಂದ.ಎಚ್.ಕಲಕೇರಿಯವರು ಮಾತನಾಡಿ ಮಾಸ್ತಿಯವರು ಕನ್ನಡದ ಮೊದಲ ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ. ಕಥೆಗಳಿಗೂ ಮಾಸ್ತಿಯವರಿಗೂ ಅವಿನಾಭಾವ ಸಂಬಂಧ. ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ. ಅವರ ಕಥೆಗಳಲ್ಲಿ ಕಥಾಸಾಹಿತ್ಯದ ಅತ್ಯುತ್ತಮ ಅಂಶಗಳಿವೆ. ನಿಜಗಲ್ಲಿನ ರಾಣಿ, ಒಂದು ಹಳೆಯ ಕಥೆ, ಕಾಮನ ಹಬ್ಬದ ಒಂದು ಕಥೆ, ಮೊಸರಿನ ಮಂಗಮ್ಮ, ಜೋಗ್ಯೋರ ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಮೊದಲಾದವು ಶ್ರೇಷ್ಠ ಕಥೆಗಳಾಗಿವೆ. ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ. ಜೀವನದ ಅನುಭವ ನಿಚ್ಚಳ. ಕಥೆಯ ನಿರೂಪಣೆಗೆ ಅವರದ್ದೇ ಆದ ವಿಧಾನವಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಮತ್ತು ಮಾಸ್ತಿಯವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ

ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು.

Post a Comment

0Comments

Post a Comment (0)