ಯುವಪಥದಲ್ಲಿ ಜು.3ತನಕ ಚಿತ್ರಕಲಾ ಪ್ರದರ್ಶನ

varthajala
0

ಬೆಂಗಳೂರು: ಚಿತ್ರಕಲೆಗಳಿಗೆ ತನ್ನದೇ ಆದ ನೈಜವಾದ ಶ್ರೀಮಂತ ಪರಂಪರೆ ಇದ್ದು, ಅದನ್ನು ಅಧ್ಯಯನಶೀಲವಾಗಿ ನೋಡುವ ಮನಸ್ಥಿತಿ ಬಹಳ ಮುಖ್ಯವಾಗಿದೆ ಎಂದು ಕಲಾ ವಿಮರ್ಶಕ ಸುಬ್ರಹ್ಮಣ್ಯಂ ವೇಣುಗೋಪಾಲ್ ಕೆ ಅವರು ಹೇಳಿದ್ದಾರೆ. ಜಯನಗರದ ಯುವಪಥದಲ್ಲಿ ಸಂಸ್ಕಾರ ಭಾರತಿ ಮತ್ತು ಹೊಯ್ಸಳ ಚಿತ್ರಕಲಾ ಪರಿಷತ್ ಏರ್ಪಡಿಸಿದ್ದ ಹೊಯ್ಸಳ ಕುಂಚ ಕಲಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರಕಲೆ ಹೀಗೆ ಎಂದು ವ್ಯಾಖ್ಯಾನ ನೀಡುವುದು ಸರಿಯಾದದ್ದು ಅಲ್ಲ. ಒಬ್ಬೊಬ್ಬರು ಒಂದೊಂದು ದೃಷ್ಟಿಯಲ್ಲಿ ಅದನ್ನು ನೋಡುವ ನೈಜತೆಯನ್ನು ಸದಾ ನಾವು ಉಳಿಸಿಕೊಳ್ಳಬೇಕು. ಚಿತ್ರಕಲೆ ರಚನೆಯಾದ ಮೇಲೆ ಅದನ್ನು ಹಾಗೆ ಬಿಡಬೇಕು. ಅಭಿಪ್ರಾಯಗಳನ್ನು ಆದರಿಸಿ ಮಾರ್ಪಾಡು ಮಾಡಲು ಹೋಗಬಾರದು ಎಂದರು.

                           
ಇತ್ತೀಚಿನ ತಲೆಮಾರಿನ ಚಿತ್ರ ಕಲಾವಿದರು ವಾಸ್ತವತೆ ಅರ್ಥ ಮಾಡಿಕೊಂಡು ಈ ಕ್ಷೇತ್ರದಲ್ಲಿ ಮುಂದುವರಿಯುವ ಚಿಂತನೆ ಮಾಡಬೇಕು. ಯಾವಾಗಲೂ ಬದುಕು ನಮಗೆ ಬಹಳ ಮುಖ್ಯ. ಅದರ ಜೊತೆಗೆ ಚಿತ್ರಕಲೆ ಹವ್ಯಾಸಿ ವೃತ್ತಿಯಾಗಿ ಅಳವಡಿಸಿಕೊಳ್ಳುವುದು ಸೂಕ್ತ ಎಂದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪ್ರತಿಯೊಬ್ಬರಿಗೂ ಪ್ರತಿಭೆ ಇರುತ್ತದೆ. ಅವರವರ ಕುಂಚದಲ್ಲಿ ಅರಳಿರುವ ಚಿತ್ರಕಲೆಗೆ ಬೆಲೆ ಕಟ್ಟಲು ಆಗದು. ಸಮಾಜಕ್ಕೆ ಮುಖಾ ಮುಖಿಯಾಗುವ ಚಿತ್ರಕಲೆಯನ್ನು ರಚಿಸುವಂತೆ ಸಲಹೆ ನೀಡಿದರು. ಇತಿಹಾಸದ ಕಾಲಘಟ್ಟದಿಂದಲೂ ಚಿತ್ರಕಲೆಗೆ ಮಹತ್ವದೆ ಇದೆ. ಅವರ ಭಾವನೆಗಳು ಮತ್ತು ಕಲ್ಪನೆಗಳನ್ನು ಕುಂಚದ ಮೂಲಕ ವಿನ್ಯಾಸಗೊಳಿಸಲು, ವಾಸ್ತವತೆಗೆ ಕನ್ನಡಿ ಹಿಡಿಯಲು ಚಿತ್ರಕಲೆಗೆ ಸಾದ್ಯವಿದೆ. ಈ ನಿಟ್ಟಿನಲ್ಲಿ ವೃತ್ತಿಪರತೆಯಿಂದ ಕಲಾವಿದರು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.
                             
ಸಂಸ್ಕಾರ ಭಾರತಿಯ ಆನೂರು ಅನಂತಕೃಷ್ಣಶರ್ಮ ಮಾತನಾಡಿ, ಸೂಕ್ಷ್ಮ ಮನಸ್ಸಿದ್ದವರು ಸಂಗೀತಕಾರರು, ಕಲಾವಿದರು ಆಗಲು ಸಾಧ್ಯ. ನಿಮ್ಮಗಳ ಪ್ರತಿಭೆ ಅನಾವರಣಗೊಳ್ಳಲು ಇಂಥ ವೇದಿಕೆಗಳು ನೆರವಾಗುತ್ತವೆ ಎಂದರು. ಡಿಎಸ್‌ಸಿಆರ್‌ಟಿ ಉಪ ನಿರ್ದೇಶಕ ಡಾ.ಎಂ.ಎನ್.ಕಟ್ಟಿ ಮಾತನಾಡಿ, ಚಿತ್ರಕಲಾವಿದರು ಎಂದರೆ ಹಿಂದಿನ ಕಾಲದಲ್ಲಿದ್ದ ಭಾವನೆಗಳೇ ಬೇರೆ. ಇಂದಿನ ಭಾವನೆಗಳೇ ಬೇರೆ. ಈಗ ಹೆಚ್ಚು ಅವಕಾಶಗಳು ಲಭ್ಯವಾಗುತ್ತಿವೆ ಎಂದರು.
                             
ಹೊಯ್ಸಳ ಚಿತ್ರಕಲಾ ಪರಿಷತ್ ಸಂಯೋಜಕ ಕೆ.ಎನ್.ಶಂಕರಪ್ಪ ಮಾತನಾಡಿ, ಹಾಸನದ ಚಿತ್ರಕಲಾವಿದರನ್ನು ಒಟ್ಟು ಮಾಡಿ ಬೆಂಗಳೂರಿನಲ್ಲಿ ಚಿತ್ರಕಲಾ ಪ್ರದರ್ಶನ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ವೇದಿಕೆ ಮೂಲಕ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದರು.
ಚಿತ್ರಕಲಾ ಪ್ರದರ್ಶನ ಜುಲೈ 3 ತನಕ  ಪ್ರತಿ ದಿನ 11 ಗಂಟೆಗೆ ವೀಕ್ಷಣೆಗೆ ಲಭ್ಯವಿದೆ.  ಚಿತ್ರಕಲೆಯಲ್ಲಿ ಕಲಾವಿದನ ನೈಜತೆ ಮುಖ್ಯ: ಸುಬ್ರಹ್ಮಣ್ಯಂ

Post a Comment

0Comments

Post a Comment (0)